ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆ (KASS) ಬಗ್ಗೆ ನಿಮಗೆಷ್ಟು ಗೊತ್ತು?

ರಾಜ್ಯದ ಸರ್ಕಾರಿ ನೌಕರರಿಗೆ ಮತ್ತು ಅವರ ಕುಟುಂಬ ಸದಸ್ಯರಿಗೆ ಅನುಕೂಲವಾಗುವಂತೆ ಸರ್ಕಾರವು ಮಹತ್ವಾಕಾಂಕ್ಷೆಯ 'ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆ' (KASS) ಯನ್ನು ಜಾರಿಗೆ ತಂದಿದೆ. ಇದು ನಗದುರಹಿತ ವೈದ್ಯಕೀಯ ಚಿಕಿತ್ಸಾ ಸೌಲಭ್ಯವನ್ನು ಒದಗಿಸುವ ಸಮಗ್ರ ಆರೋಗ್ಯ ವಿಮಾ ಯೋಜನೆಯಾಗಿದೆ. ಅಕ್ಟೋಬರ್ 1 ರಿಂದ ಜಾರಿಗೆ ಬಂದಿರುವ ಈ ಯೋಜನೆಯ ಸಂಪೂರ್ಣ ವಿವರ ಇಲ್ಲಿದೆ.

ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆ (KASS) ಬಗ್ಗೆ ನಿಮಗೆಷ್ಟು ಗೊತ್ತು?


ಯೋಜನೆಯ ಪ್ರಮುಖ ಅಂಶಗಳು

  • ಅನುಷ್ಠಾನ: ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಡಿಯಲ್ಲಿ ಬರುವ ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್ ವತಿಯಿಂದ ಯೋಜನೆ ಅನುಷ್ಠಾನಗೊಳ್ಳುತ್ತದೆ.
  • ವ್ಯಾಪ್ತಿ: ಈ ಯೋಜನೆಯ ವ್ಯಾಪ್ತಿಯಲ್ಲಿ ಸುಮಾರು 2000 ಕಾಯಿಲೆಗಳಿಗೆ ಚಿಕಿತ್ಸೆ ಲಭ್ಯವಿದೆ.
  • ಚಿಕಿತ್ಸಾ ವಿಧಾನ: ನೌಕರರು ಹಾಗೂ ಅವರ ಕುಟುಂಬದವರು ಸರಕಾರಿ ಆಸ್ಪತ್ರೆಗಳು ಮತ್ತು ಯೋಜನೆಯಡಿ ನೋಂದಾಯಿತ ಖಾಸಗಿ ಆಸ್ಪತ್ರೆಗಳಲ್ಲಿ ನಗದುರಹಿತ ಚಿಕಿತ್ಸೆ ಪಡೆಯಲು ಅವಕಾಶವಿದೆ.

ಅರ್ಹತೆ ಮತ್ತು ವಂತಿಗೆ ವಿವರ

1. ಅರ್ಹರು ಯಾರು?

  • ರಾಜ್ಯ ಸರಕಾರಿ ನೌಕರರು ಮತ್ತು ಅವರ ಅವಲಂಬಿತ ಸದಸ್ಯರು (ಕೆಲವು ಇಲಾಖೆ/ಗುಂಪುಗಳನ್ನು ಹೊರತುಪಡಿಸಿ) ಯೋಜನೆಯಡಿ ಅರ್ಹರು.
  • ಪ್ರೊಬೇಷನರಿ ಅವಧಿಯಲ್ಲಿದ್ದರೂ ನೌಕರರು ಅರ್ಹರಾಗಿರುತ್ತಾರೆ.
  • ಮಲಮಕ್ಕಳಿಗೂ ಈ ಯೋಜನೆಯಡಿ ಸೌಲಭ್ಯ ಪಡೆಯಬಹುದು.
  • ನೋಂದಣಿ ಐಚ್ಛಿಕವಾಗಿದೆ. ಈ ಯೋಜನೆ ಬೇಡ ಎನ್ನುವವರು ದೂರ ಉಳಿಯಬಹುದು.

2. ಮಾಸಿಕ ವಂತಿಗೆ (ಕಂತು)

ನೌಕರರ ಗುಂಪಿನ ಆಧಾರದ ಮೇಲೆ ನಿಗದಿತ ವಂತಿಗೆ ಮೊತ್ತವನ್ನು ವೇತನದಲ್ಲಿಯೇ ಕಡಿತಗೊಳಿಸಲಾಗುತ್ತದೆ:

ನೌಕರರ ಗುಂಪುಮಾಸಿಕ ವಂತಿಗೆ
ಗ್ರೂಪ್-ಎ₹1,000
ಗ್ರೂಪ್-ಬಿ₹500
ಗ್ರೂಪ್-ಸಿ₹350
ಗ್ರೂಪ್-ಡಿ₹250

3. ಪತಿ-ಪತ್ನಿ ಸರ್ಕಾರಿ ನೌಕರರಾಗಿದ್ದರೆ

  • ಇಬ್ಬರೂ ಸರಕಾರಿ ನೌಕರರಾಗಿದ್ದರೆ, ಹೆಚ್ಚಿನ ಮೂಲ ವೇತನ ಪಡೆಯುವವರು ಮುಖ್ಯ ಕಾರ್ಡ್ ಹೋಲ್ಡರ್ ಆಗಿ ನೋಂದಾಯಿಸಿಕೊಳ್ಳಬೇಕು.
  • ಆದರೆ, ಇಬ್ಬರೂ ತಮ್ಮ ಪೋಷಕರನ್ನು (ಅತ್ತೆ-ಮಾವ ಸೇರಿದಂತೆ) ಅವಲಂಬಿತರನ್ನಾಗಿ ಸೇರಿಸಲು ಬಯಸಿದರೆ, ಇಬ್ಬರೂ ಪ್ರತ್ಯೇಕವಾಗಿ ನೋಂದಾಯಿಸಿಕೊಳ್ಳಬೇಕಾಗುತ್ತದೆ.

4. ಅವಲಂಬಿತರ ಅರ್ಹತಾ ಮಾನದಂಡಗಳು

ಪುತ್ರ/ಪುತ್ರಿ: ಉದ್ಯೋಗಿಗಳಾಗುವವರೆಗೆ ಅಥವಾ 30 ವರ್ಷ ವಯಸ್ಸು ಮೀರುವವರೆಗೆ ಇಲ್ಲವೇ ವಿವಾಹವಾಗುವವರೆಗೆ ಅರ್ಹರು. ಶಾಶ್ವತ ದೈಹಿಕ ಅಥವಾ ಮಾನಸಿಕ ಅಂಗವೈಕಲ್ಯದಿಂದ ಬಳಲುವ ಮಕ್ಕಳಿಗೆ ವಯಸ್ಸಿನ ಮಿತಿ ಅನ್ವಯಿಸುವುದಿಲ್ಲ.

ಪೋಷಕರು/ಅತ್ತೆ-ಮಾವ: ಸರಕಾರಿ ನೌಕರರೊಂದಿಗೆ ವಾಸವಾಗಿರಬೇಕು ಮತ್ತು ಅವರ ಮಾಸಿಕ ಆದಾಯ/ಕುಟುಂಬ ಪಿಂಚಣಿ ₹1,27,000 (ಚಾಲ್ತಿಯಲ್ಲಿರುವ ತುಟ್ಟಿಭತ್ಯೆ ಸೇರಿ) ಮೀರುವಂತಿಲ್ಲ.

ಚಿಕಿತ್ಸಾ ಸೌಲಭ್ಯಗಳು ಮತ್ತು ನಿಯಮಗಳು

ಚಿಕಿತ್ಸೆಗೆ ಸಂಬಂಧಿಸಿದ ಪ್ರಮುಖ ನಿಯಮಗಳು

  • ವೈದ್ಯರ ಶಿಫಾರಸು (Referral): ಚಿಕಿತ್ಸೆ ಪಡೆಯಲು ಯಾವುದೇ ವೈದ್ಯರಿಂದ ಶಿಫಾರಸು ಪತ್ರ ತರುವ ಅಗತ್ಯ ಇರುವುದಿಲ್ಲ.
  • ಒಳರೋಗಿ ಚಿಕಿತ್ಸೆ (In-patient): ಹಗಲು ಚಿಕಿತ್ಸಾ ಕೇಂದ್ರ, ಕಣ್ಣಿನ ಚಿಕಿತ್ಸಾ ಆಸ್ಪತ್ರೆ, ದಂತ ಚಿಕಿತ್ಸಾ ಆಸ್ಪತ್ರೆಗಳೂ ಸೇರಿದಂತೆ ಒಳರೋಗಿ ಚಿಕಿತ್ಸೆಗೆ ಸೌಲಭ್ಯ ಲಭ್ಯವಿದೆ.
  • ಹೊರರೋಗಿ ಚಿಕಿತ್ಸೆ (OPD): ಯೋಜನೆಯಡಿ ಹೊರರೋಗಿ ಚಿಕಿತ್ಸೆ ನಗದುರಹಿತವಾಗಿರುವುದಿಲ್ಲ. ಔಷಧೋಪಚಾರಕ್ಕೆ ನೌಕರರು ಭರಿಸಿದ ವೆಚ್ಚವನ್ನು ನಿಯಂತ್ರಣಾಧಿಕಾರಿಗಳಿಂದ ಮರುಪಾವತಿ ಮಾಡಿಕೊಳ್ಳಬಹುದು.
  • ವಿಶೇಷ ಚಿಕಿತ್ಸೆಗಳು: IVF, ರಿಪ್ಲೇಸ್‌ಮೆಂಟ್, ಮತ್ತು ಅಂಗಾಂಗ ಕಸಿ (ಟ್ರಾನ್ಸ್‌ಪ್ಲಾಂಟ್) ಚಿಕಿತ್ಸೆಗಳಿಗೆ ಪೂರ್ವಾನುಮೋದನೆ ಕಡ್ಡಾಯ. IVF ಚಿಕಿತ್ಸೆಗೆ ಜಿಲ್ಲಾ ಸರಕಾರಿ ಸ್ತ್ರೀರೋಗ ತಜ್ಞರ ಶಿಫಾರಸು ಅಗತ್ಯ.
  • ಭೇಟಿ ಮಿತಿ: ಫಲಾನುಭವಿಯು ಒಂದು ತಿಂಗಳ ಅವಧಿಯಲ್ಲಿ ಒಂದೇ ನೋಂದಾಯಿತ ಆಸ್ಪತ್ರೆಗೆ ಗರಿಷ್ಠ ಮೂರು ಬಾರಿ ಭೇಟಿ ನೀಡಬಹುದು ಮತ್ತು ಪ್ರತಿ ಭೇಟಿ ವೇಳೆ ಮೂರು ವಿಭಿನ್ನ ತಜ್ಞರನ್ನು ಭೇಟಿ ಮಾಡಲು ಅವಕಾಶವಿದೆ.
  • ಪಾವತಿ ವ್ಯವಸ್ಥೆ: CGHS ವೈದ್ಯಕೀಯ ಚಿಕಿತ್ಸಾ ಆಧಾರದ ಮೇಲೆ ಯಾವುದೇ ಮಿತಿ ಇಲ್ಲದೆ ಪಾವತಿ ವ್ಯವಸ್ಥೆ ಕಲ್ಪಿಸಲಾಗಿದೆ.

ಆಸ್ಪತ್ರೆ ವಾರ್ಡ್ ಸವಲತ್ತು

ನೌಕರರ ಗುಂಪಿನ ಆಧಾರದ ಮೇಲೆ ವಾರ್ಡ್ ಸೌಲಭ್ಯವನ್ನು ನಿಗದಿಪಡಿಸಲಾಗಿದೆ:

ನೌಕರರ ಗುಂಪುವಾರ್ಡ್ ಸವಲತ್ತು
ಗ್ರೂಪ್-ಎ ಮತ್ತು ಬಿಪ್ರೈವೇಟ್ ವಾರ್ಡ್
ಗ್ರೂಪ್-ಸಿಸೆಮಿ ಪ್ರೈವೇಟ್ ವಾರ್ಡ್
ಗ್ರೂಪ್-ಡಿಜನರಲ್ ವಾರ್ಡ್
ನಿಗದಿಪಡಿಸಿದ ಮಾನದಂಡಕ್ಕಿಂತ ಉನ್ನತ ಮಟ್ಟದ ವಾರ್ಡ್‌ ಸೇವೆ ಬಯಸಿದರೆ, ಫಲಾನುಭವಿಯು ವ್ಯತ್ಯಾಸದ ಹಣವನ್ನು ಪಾವತಿಸಿ ರಸೀದಿ ಪಡೆಯಲು ಅವಕಾಶವಿದೆ.

ತುರ್ತು ಚಿಕಿತ್ಸೆ ಮತ್ತು ಮರುಪಾವತಿ

  • ನೋಂದಣಿಯಾಗದ ಆಸ್ಪತ್ರೆಯಲ್ಲಿ: ತುರ್ತು ಸಂದರ್ಭದಲ್ಲಿ ಖಾಸಗಿ ನೋಂದಾಯಿತವಲ್ಲದ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದರೆ, ಚಿಕಿತ್ಸಾ ವೆಚ್ಚವನ್ನು KASS ದರ ಅಥವಾ ನಿಜವಾದ ವೆಚ್ಚ (ಯಾವುದು ಕಡಿಮೆಯೋ ಅದನ್ನು) ಪರಿಗಣಿಸಿ ಇಲಾಖಾ ಮುಖ್ಯಸ್ಥರಿಂದ ಮರುಪಾವತಿ ಮಾಡಿಕೊಳ್ಳಲು ಅವಕಾಶವಿದೆ.
  • ಅಂತರ-ರಾಜ್ಯ ಪ್ರವಾಸದ ವೇಳೆ: ಹೊರ ರಾಜ್ಯದಲ್ಲಿ ಪ್ರವಾಸದಲ್ಲಿದ್ದಾಗ ತುರ್ತು ಚಿಕಿತ್ಸೆ ಪಡೆದರೆ, KASS ದರದನ್ವಯ ವೆಚ್ಚವನ್ನು ಸಂಬಂಧಪಟ್ಟ ಇಲಾಖಾ ಮುಖ್ಯಸ್ಥರಿಂದ ಮರುಪಾವತಿ ಮಾಡಿಕೊಳ್ಳಬಹುದು.
  • ಆಂಬ್ಯುಲೆನ್ಸ್ ಶುಲ್ಕ: ನಗರ ವ್ಯಾಪ್ತಿಯಲ್ಲಿ ಪಡೆದ ಆಂಬ್ಯುಲೆನ್ಸ್ ಸೇವೆಗೆ ಶುಲ್ಕ ಮರುಪಾವತಿಗೆ ಅವಕಾಶವಿದೆ.

ನೋಂದಾಯಿತ ಆಸ್ಪತ್ರೆಗಳ ಪಟ್ಟಿ ಮತ್ತು ಇತರೆ ಆದೇಶಗಳು:

📞 ಸಹಾಯ ಮತ್ತು ದೂರು ನಿವಾರಣೆ

  • ಸಹಾಯವಾಣಿ (ಹೆಲ್ಪ್‌ಲೈನ್): ಆಸ್ಪತ್ರೆಗಳ ಚಿಕಿತ್ಸಾ ಸಂಬಂಧಿತ ಮಾಹಿತಿ ಮತ್ತು ವಿಚಾರಣೆಗಾಗಿ ನೀವು 18004258330 ಈ ದೂರವಾಣಿ ಸಂಖ್ಯೆಯನ್ನು ಸಂಪರ್ಕಿಸಬಹುದು.
  • ಕುಂದುಕೊರತೆ ನಿವಾರಣೆ: ನೋಂದಾಯಿತ ಆಸ್ಪತ್ರೆಗಳಲ್ಲಿ ವೈದ್ಯಕೀಯ ನಿರ್ಲಕ್ಷ್ಯವಾದರೆ, ಎಲ್ಲ ದಾಖಲೆಗಳೊಂದಿಗೆ ಜಿಲ್ಲಾಧಿಕಾರಿಗಳ ಕುಂದುಕೊರತೆ ಅಧಿಕಾರಿಗಳನ್ನುಅಥವಾ ರಾಜ್ಯ/ಭಾರತೀಯ ವೈದ್ಯಕೀಯ ಮಂಡಳಿಯನ್ನು ಸಂಪರ್ಕಿಸಬಹುದು.

ಈ ಯೋಜನೆಯು ರಾಜ್ಯ ಸರಕಾರಿ ನೌಕರರು ಮತ್ತು ಅವರ ಅವಲಂಬಿತರ ಆರೋಗ್ಯ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳುವಲ್ಲಿ ಮಹತ್ವದ ಪಾತ್ರ ವಹಿಸುತ್ತದೆ. ನಿಮ್ಮ ಮತ್ತು ನಿಮ್ಮ ಕುಟುಂಬದ ಉತ್ತಮ ಆರೋಗ್ಯಕ್ಕಾಗಿ ಈ ಯೋಜನೆಯನ್ನು ಸದುಪಯೋಗಪಡಿಸಿಕೊಳ್ಳಿ.
-----

🖋️ ಸೂಚನೆ:
ಈ ಲೇಖನ ಮಾಹಿತಿ ಹಂಚಿಕೆ ಉದ್ದೇಶಕ್ಕಾಗಿ ಮಾತ್ರ ಪ್ರಕಟಿಸಲಾಗಿದೆ., ಅಧಿಕೃತ ಮಾಹಿತಿಗಾಗಿ https://sast.karnataka.gov.in/sast/English/ ಅಥವಾ  https://arogya.karnataka.gov.in/
 ವೆಬ್‌ಸೈಟ್‌ಗೆ ಭೇಟಿ ನೀಡಿ.

You May Also Like 👇

Loading...
Post a Comment (0)
Previous Post Next Post